ಯುದ್ಧ ಎನ್ನುವ ಪದ ಬಹಳ ಶಕ್ತಿಶಾಲಿ. ಅದೇ ಸಮಯದಲ್ಲಿ ಅದು ಭಯವನ್ನು ಸಹ ಹುಟ್ಟಿಸುತ್ತದೆ. ಪೂರ್ಣ ಪ್ರಮಾಣದ ಯುದ್ಧವನ್ನು ಇಂದು ಜಗತ್ತಿನ ಯಾವ ದೇಶವೂ ಭರಿಸುವ ಶಕ್ತಿಯನ್ನು ಹೊಂದಿಲ್ಲ. ಯುದ್ಧ ಅಭಿವೃದ್ಧಿಯ, ಸಿರಿವಂತಿಕೆಯ ಶತ್ರು. ಆದರೂ ಕೆಲವೊಮ್ಮೆ ಕೆಲವು ಸಂಘರ್ಷಗಳು ಅನಿವಾರ್ಯ. ಕೆಲವು ಬಾರಿ ಶಾಂತಿಯಿಂದ ಮತ್ತು ನೆಮ್ಮದಿಯಿಂದ ಬದುಕಲು ಇಂತಹ ಸಂಘರ್ಷಗಳ ಅವಶ್ಯಕತೆ ಇರುತ್ತದೆ. ಭಾರತ ಎಂದಿಗೂ ಕಾಲು ಕೆರೆದು ಜಗಳಕ್ಕೆ ಹೋದ ಉದಾಹರಣೆ ಇತಿಹಾಸದಲ್ಲಿ ಸಿಗುವುದಿಲ್ಲ. ಈ ಬಾರಿಯ ಇಂಡೋ ಪಾಕ್ ಯುದ್ಧಕ್ಕೂ, ಪಾಕಿಸ್ತಾನ ಕಾರಣ ಎನ್ನುವುದು ಸ್ಪಷ್ಟ. ನಾವು ಅವರ ಉದ್ಧಟತನಕ್ಕೆ ತಕ್ಕ ಉತ್ತರವನ್ನು ನೀಡಿದ್ದೇವೆ. ಇಂತಹ ಘಟನೆಯನ್ನು ಹದಿನೈದು ದಿನಗಳ ಕಾಲ ನೇರವಾಗಿ ನೋಡಿ, ಅನುಭವಿಸಿ ಅದನ್ನು ಅಕ್ಷರಕ್ಕೆ ಇಳಿಸಿದ್ದಾರೆ ಅಭಿಷೇಕ್. ಹದಿನೈದು ದಿನದ ಘಟನಾವಳಿಗಳ ಅನುಭವ ಕಥನ, ವರದಿಗಾರನ ಮೈನವಿರೇಳಿಸುವ ರೋಚಕ ಡೈರಿಯಿದು. ಇಲ್ಲಿನ ಬರಹ, ಭಾಷೆ ನೇರವಾಗಿ ಹೃದಯಕ್ಕೆ ನಾಟುತ್ತದೆ. ನಾವೇ ವಾರ್ ಫೀಲ್ಡ್ ನಲ್ಲಿದ್ದೇವೆ ಎನ್ನಿಸುತ್ತದೆ. - ರಂಗಸ್ವಾಮಿ ಮೂಕನಹಳ್ಳಿ ಲೇಖಕರು, ಆರ್ಥಿಕ ತಜ್ಞರು