ಇಲ್ಲಿನ ಕಥೆಗಳಲ್ಲಿ ಟರ್ಕಿಯ ಒಟ್ಟೋಮನ್ ಸುಲ್ತಾನರ ಅಂತಃಪುರದ ಬೇಗುದಿಯ ಸುಡುಶಾಖವಿದೆ, ನಮ್ಮದೇ ಕೆಂಪೇಗೌಡರ ಕಾಲದ ಹೆಣ್ಣುಮಗಳೊಬ್ಬಳ ಬಲಿದಾನದ ಮೇಲೆ ಇದೆ, ರಾಷ್ಟ್ರಕೂಟರ ಅರಸರ ಆಸ್ಥಾನದಲ್ಲಿನ ಪ್ರಜೆಗಳ ಒಕ್ಕೊರಲ ಸದ್ದು ಇದೆ, ಪಾಳೇಗಾರರ ಶೌರ್ಯ ಇದೆ. ಮಹಾನ್ ರಾಜರ ಆಡಳಿತದಲ್ಲಿ ಆಗಿಹೋದ ಸಾಮಾನ್ಯರ ಅಸಾಮಾನ್ಯ ಕಥೆಗಳೂ ಇವೆ. ವಿಜಯನಗರ ಅರಸರು, ಕೆಳದಿಯ ರಾಜರು, ಆದಿಲ್ ಶಾಹಿಗಳು, ಸುಲ್ತಾನರು, ಹೈದರಾಲಿಯಂಥವರೆಲ್ಲ ಇಲ್ಲಿ ತಂತಮ್ಮ ಆಸ್ಥಾನಗಳಲ್ಲಿದ್ದಾರೆ, ಸಾಮಂತ ರಾಜರು ಸಿರಿವಂತಿಕೆ ಮೆರೆಯುತ್ತಿದ್ದಾರೆ, ನಾಡು-ನುಡಿಯ ವೈಭವವಂತೂ ಕಳೆಗಟ್ಟಿದೆ. ಚರಿತ್ರೆಯ ಬಗೆಬಗೆ ಪುಟಗಳು ಕುತೂಹಲಕರ ಕಥೆಗಳಾಗಿ ತೆರೆದುಕೊಂಡಿರುವ ರೀತಿ ಇದು. ವಿಜಯ ಕರ್ನಾಟಕ-ವೀರಲೋಕ ಜಂಟಿಯಾಗಿ ಆಯೋಜಿಸಿದ್ದ 2025ರ ದೀಪಾವಳಿ ಕಥಾಸ್ಪರ್ಧೆಯಲ್ಲಿ ಅಗ್ರ 25 ಸ್ಥಾನ ಗಳಿಸಿದ ಕಥೆಗಳ ಗುಚ್ಛ ಇದು. ಐತಿಹಾಸಿಕ ಕಥೆಗಳ ಕೃಷಿ ಕನ್ನಡದಲ್ಲಿ ಆಗಿರುವುದು ಕಡಿಮೆ. ಇಂಥ ಸಂದರ್ಭದಲ್ಲಿ ಕನ್ನಡದ ಕಥೆಗಾರರನ್ನು ಐತಿಹಾಸಿಕ ಕಥೆ ಬರೆಯಲು ಪ್ರೇರೇಪಿಸಿರುವ ಈ ಸ್ಪರ್ಧೆ ಬಲು ಆಪೂರ್ವ ನಡೆ. ಈ ಸವಾಲಿಗೆ ತೆರೆದುಕೊಂಡ ನೂರಾರು ಕಥೆಗಾರರ ಕಥೆಗಳಲ್ಲಿ ಗಮನ ಸೆಳೆದ ಕಥೆಗಳು ಇಲ್ಲಿವೆ. ಇದು ಇಂದಿನವರು ಬರೆದ ಅಂದಿನವರ ಕಥಾಜಗತ್ತು.
ತೀರ ಸಾಮಾನ್ಯರನ್ನು ಕುರಿತ ಕತೆಗಳಿವು, ನಿಜ. ಆದರೆ ಈ ಸಾಮಾನ್ಯರ ಕನಸುಗಳು, ನಿರಾಶಾದಾಯಕವಾಗಿದ್ದರೂ ಅವರ ದೈನಿಕದ ಸ್ಥಿತಿಗತಿಗಳನ್ನು ಮರೆಮಾಚುವುದಿಲ್ಲ.
‘ ಪ್ರೀತಿ ‘ ಇದು ಎರಡೇ ಅಕ್ಷರದ ಒಂದು ಚಿಕ್ಕ ಪದವಾದರೂ ಎಲ್ಲಾ ಜೀವ ಚೇತನದಲ್ಲೂ ಸುಪ್ತವಾಗಿರುವ ಒಂದು ಅಪೂರ್ವ ಅನಂತ ಅನುಭೂತಿ. ಅದರಲ್ಲೂ ಮಾನವನಲ್ಲಿ ಹದಿ ಹರೆಯ ಅರಳುವ ಕಾಲಘಟ್ಟದಲ್ಲಿ ಪರಸ್ಪರ ಆಕರ್ಷಣೆಯ ರೆಕ್ಕೆ ಕಟ್ಟಿಕೊಂಡೇ ಹ್ರದಯಕ್ಕೆ ಲಗ್ಗೆ ಇಡುತ್ತದೆ. ಆಗ ಅದುಯಾವ ಪ್ರತಿಬಂಧಕ್ಕೂ ಒಳ ಪಡುವುದು ಕಷ್ಟ.
ರಾಜಿರಹಿತ ಮನೋಭಾವದಲ್ಲಿ ಅಪಾರ ಆಶಾವಾದ, ಜೀವನೋತ್ಸಾಹ, ಆದರ್ಶವಾದಿ ನೆಲೆಯಲ್ಲಿ ಬರೆದ ಬರಹಗಳಿವು. ಲೇಖಕರು ಅಮೆರಿಕದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ 2006ರ ಇಸವಿಯ ಸ೦ದರ್ಭದಲ್ಲಿ ಕರ್ನಾಟಕದಲ್ಲಿ ಆರಂಭಿಸಿದ "ವಿಕ್ರಾಂತ ಕರ್ನಾಟಕ" ವಾರಪತ್ರಿಕೆಗೆ ಬರೆದ ಈ ಸಂಪುಟ-1 ಪುಸ್ತಕದಲ್ಲಿಯ ಲೇಖನಗಳಲ್ಲಿ ಕರ್ನಾಟಕ, ಭಾರತ, ಅಮೆರಿಕದ ತನಕ ವ್ಯಾಪಿಸಿಕೊಂಡ ರಾಜಕಾರಣವಿದೆ, ಸಾಮಾಜಿಕ ಸಂದರ್ಭಗಳ ವಿಶ್ಲೇಷಣೆ ಇದೆ, ಜನಬದುಕಿನ ಮೇಲೆ ವಿಜ್ಞಾನ-ತಂತ್ರಜ್ಞಾನಗಳ ನೂತನ ಆವಿಷ್ಕಾರ ಮತ್ತು ಅನ್ವಯಗಳ ಹಲವು ವಿವರಗಳಿವೆ, ಸಾಹಿತ್ಯ, ಸಿನಿಮಾ, ಕ್ರೀಡಾ ಸಂಬಂಧಿ ಲೇಖನಗಳಿವೆ. ಸ್ಥಳೀಯ ಮತ್ತು ಜಾಗತಿಕ ಆರ್ಥಿಕ ವಿದ್ಯಮಾನಗಳೂ ಚರ್ಚಿಸಲ್ಪಟ್ಟಿವೆ. ಪ್ರಜಾಪ್ರಭುತ್ವ ಮತ್ತು ಸಂವಾದದ ಮಹತ್ವವನ್ನು ಒಮ್ಮೊಮ್ಮೆ suttle ಆಗಿ, ಒಮ್ಮೊಮ್ಮೆ ಗಟ್ಟಿಯಾಗಿ ಹೇಳಲಾಗಿದೆ. ಹಲವು ವ್ಯಕ್ತಿಚಿತ್ರಗಳ ಮೂಲಕ ಸಾರ್ವತ್ರಿಕ ಮೌಲ್ಯಗಳನ್ನು ಮತ್ತು ಆದರ್ಶಗಳನ್ನು ಪ್ರತಿಪಾದಿಸಲಾಗಿದೆ.
“ಅಮೋಘವರ್ಷ” ಇದೊಂದು ಸಂಶೋಧನಾತ್ಮಕ ಐತಿಹಾಸಿಕ ಕಾದಂಬರಿ. ಒಂಭತ್ತನೆಯ ಶತಮಾನದಲ್ಲಿ ಮಾನ್ಯಖೇಟವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳಿದ ರಾಷ್ಟ್ರಕೂಟ ದೊರೆ ಅಮೋಘವರ್ಷ ಬಿರುದಾಂಕಿತ ನೃಪತುಂಗ, ಮಗಧದ ಸಾಮ್ರಾಟ ಅಶೋಕನಂತೆ ಶಾಂತಿ ಮಾರ್ಗದಲ್ಲಿಯೇ ವಿಸ್ತಾರವಾದ ರಾಜ್ಯವನ್ನು ಆಳಿದವನು. ಅಶೋಕ ಬೌದ್ಧಧರ್ಮವನ್ನು ಅವಲಂಬಿಸಿದರೆ ನೃಪತುಂಗ ಜೈನಧರ್ಮವನ್ನು ಅವಲಂಬಿಸಿದವನು. ಅಮೋಘವರ್ಷ” ಕಾದಂಬರಿ ರಾಷ್ಟ್ರಕೂಟರ ಕುರಿತು ಪೂರ್ಣ ಪ್ರಮಾಣದಲ್ಲಿ ಅರಿತುಕೊಳ್ಳುವುದಕ್ಕೆ ಸಹಾಯಕಾರಿಯಾಗಲಿದೆ. ಲೇಖಕರಾದ ಲಕ್ಷ್ಮಣ ಕೌಂಟೆ ಅವರು ಹಲವು ಗ್ರಂಥಗಳನ್ನು ಅಧ್ಯಯನ ಮಾಡಿ ಈ ಕೃತಿಯನ್ನು ರಚಿಸಿದ್ದು ರಾಷ್ಟ್ರಕೂಟರ ಕುರಿತು ಇದುವರೆಗೂ ಪ್ರಕಟವಾದ ಎಲ್ಲ ಕಾದಂಬರಿಗಳಿಗಿಂತಲೂ ಭಿನ್ನವೂ ವಿಶಿಷ್ಠವೂ ಆಗಿದೆ.
ತೃತೀಯ ಅಂಗಿಗಳ ಒಳತೋಟಿ, ಹಣ್ಣಿನ ಬೇಗುದಿ, ಎಳೆಮನದ ತೊಳಲಾಟ, ಮನೋವೈದ್ಯಕೀಯ ಒಳನೋಟ…
ಕಳೆದ 30 ವರ್ಷದಿಂದ ಬರೆವಣಿಗೆಯಲ್ಲಿ ತೊಡಗಿಸಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಪಾವೂರು ಗ್ರಾಮದ ಅರಸ್ತಾನ ಎಂಬಲ್ಲಿನ ಹಂಝ ಮಲಾರ್ ವೃತ್ತಿಯಲ್ಲಿ ಪತ್ರಕರ್ತ. ತನ್ನ ವೃತ್ತಿಯ ಸಂದರ್ಭ ನಾನಾ ವಿಧದ ಜನರೊಂದಿಗೆ ನೇರ ಸಂಪರ್ಕ ಸಾಧಿಸುವ ಮೂಲಕ ಜೀವನಾನುಭವ ಪಡೆಯುತ್ತಿರುವ ಹಂಝ ಮಲಾರ್ ಅವುಗಳನ್ನೆಲ್ಲಾ ಕಥೆಗಳಿಗೆ ಬಳಸಿಕೊಳ್ಳುತ್ತಿರುವುದು ವಿಶೇಷ. ಕಥನ ಕಲೆಯಲ್ಲಿ ಸಾಕಷ್ಟು ಹಿಡಿತ ಸಾಧಿಸಿರುವ ಹಂಝ ಮಲಾರ್ ಈವರೆಗೆ 230 ಕಥೆಗಳನ್ನು ಬರೆದಿದ್ದಾರೆ. ಈ ಸಂಕಲನದಲ್ಲಿ ಕಳೆದ ಐದು ವರ್ಷದ ಅವಧಿಯಲ್ಲಿ ಬರೆದ 10 ಕಥೆಗಳಿವೆ. "ಅರ್ಧ ಹಿಂದೂ-ಅರ್ಧ ಮುಸ್ಲಿಂ" ಜಾತ್ಯತೀತ ವ್ಯಕ್ತಿಯ ಒಳನೋಟದ ಬಗ್ಗೆ ಬೆಳಕು ಚೆಲ್ಲಿದೆ. ಪ್ರೇಮಿಗಳು ಹುಟ್ಟೂರು ಬಿಟ್ಟು ಬೇರೊಂದು ಊರಲ್ಲಿ ನೆಲೆ ನಿಲ್ಲಲು ಪ್ರಯತ್ನಿಸುವಾಗ ಪ್ರಿಯತಮೆಯನ್ನು ಮಾತ್ರ ಕೇಂದ್ರೀಕರಿಸುವುದರ ಬಗ್ಗೆ "ಓಡಿ ಬಂದವಳು" ಕಥೆಯಲ್ಲಿ ಚಿತ್ರಿಸಲಾಗಿದೆ. "ಉಮ್ಮಾ..." ಕಥೆಯು ಪ್ರತಿಷ್ಠಿತ ಕುಟುಂಬದ ಹಿರಿಯ ಮಹಿಳೆಯೊಬ್ಬರು ಆಧುನಿಕ ಬದುಕಿಗೆ ಒಗ್ಗಿಕೊಳ್ಳುವುದರ ಬಗ್ಗೆ ತಿಳಿಸುತ್ತದೆ. ಉಳಿದಂತೆ ಎಲ್ಲಾ ಕಥೆಗಳು ಒಂದನ್ನೊಂದು ಬಿಟ್ಟುಕೊಡದಷ್ಟು ವಸ್ತುವಿನಲ್ಲಿ ಪೈಪೋಟಿ ಮಾಡುತ್ತದೆ.
ಕವನ ಸಂಕಲನಗಳ ಅಂಗಳದಲ್ಲಿ ಬಿರಿದ ಮಲ್ಲಿಗೆಯ ಘಮ ಸದಾ ಹೊಸತು. ರೋಹಿತ್ ನಾಗೇಶ್ ಹೆಸರು ಇದೀಗ ಹೊಸ ಸೇರ್ಪಡೆ. ದೂರದರ್ಶನ ಮತ್ತು ಸಿನಿಮಾ ಕಲಾವಿದರಾಗಿ ನಮ್ಮೆಲ್ಲರಿಗೂ ಪರಿಚಿತರಾಗಿರುವ ರೋಹಿತ್ ನಾಗೇಶ್ ಅವರು ಉದ್ಯಮಿ ಹಾಗೂ ವ್ಯಕ್ತಿತ್ವ ವಿಕಸನ ಶಿಬಿರಗಳನ್ನು ನಡೆಸುವ ಗುರುವೂ ಹೌದು. ಸಕಲೇಶಪುರದ ಹತ್ತಿರದ ವಿಶಾಲ ಹುಲ್ಲುಹಾಸು, ಗಗನಚುಂಬಿಸಿದಂತೆ ಕಾಣುವ ಗುಡ್ಡಗಳು, ಹಾಗೂ ಕಾಫಿ ಎಸ್ಟೇಟ್ಗಳ ಪರಿಸರದಿಂದ ಹೊರಟ ಅವರ ಬದುಕಿನ ಯಾನ, ಬೆಂಗಳೂರು ಹಾಗೂ ಅನೇಕ ದೇಶಗಳನ್ನು ಸುತ್ತುವ ಮೂಲಕ ಅವರನ್ನು ಗಟ್ಟಿಗೊಳಿಸಿದೆ. ಏಕಕಾಲಕ್ಕೆ ಅವರೊಳಗಿನ ಕವಿಯನ್ನೂ ಸಲಹಿದೆ. ಭಾವನೆಗಳ ಅಭಿವ್ಯಕ್ತಿಗೆ ಕವನ ರಚನೆ ಸರಳ ಮಾರ್ಗ. ಈ ಸರಳ ಮಾರ್ಗದಲ್ಲಿ ತಮ್ಮ ಮಾರ್ಗವನ್ನು ಹುಡುಕಿಕೊಂಡಿರುವ ರೋಹಿತ್ ನಾಗೇಶ್ ಅವರ ಕವಿತೆಗಳಲ್ಲಿ ಬದಲಾದ ಕಾಲ ಮತ್ತು ಗತಿಗಳನ್ನು ದಾಖಲಿಸಿದ ಸಾಲುಗಳಿವೆ. ಮನುಷ್ಯ ಸಹಜ ಭಾವನೆ ಮತ್ತು ಕಲ್ಪನೆಗಳ ಮೊತ್ತವಿದೆ. ರೋಹಿತರ ಈ ಚಾರಣ ಆರೋಹಣವಾಗಲಿ, ಮುಂದಿನ ದಿನಗಳಲ್ಲಿ ಅವರ ಭಾವ ಪ್ರಭಾವಳಿಯೊಳಗೆ ಇನ್ನಷ್ಟು ಅನುಭವ ಮತ್ತು ಕಲ್ಪನೆಗಳು ದಕ್ಕಲಿ, ಆ ಮೂಲಕ ಕಾವ್ಯಪ್ರಭೆ ಹೊರಹೊಮ್ಮಲಿ ಎಂದು ಆಶಿಸಿ ಶುಭಕೋರುತ್ತೇನೆ. ನಿಮ್ಮ ಡಾ. ವಿ. ನಾಗೇಂದ್ರ ಪ್ರಸಾದ್ ಚಿತ್ರ ಸಾಹಿತಿ ನಿರ್ದೇಶಕರು
ಈ ಭೂಮಿಯ ಮೇಲೆ ‘ಕಾಮ’ ಯಾರನ್ನೂ ಬಿಟ್ಟಿಲ್ಲ. ಆದರೆ ಎಲ್ಲರೂ ಕಾಮಕ್ಕಾಗಿಯೇ ಬದುಕುವವರಲ್ಲ. ಪ್ರತಿಯೊಬ್ಬರ ಬದುಕಿನಲ್ಲೂ ಕವಲು ದಾರಿಗಳು ಇದ್ದೇ ಇರುತ್ತವೆ.
ಆಕಾಶಬುಟ್ಟಿಯ ಲೇಖಕರಾದ ಪ್ರೊ. ನಟರಾಜ್ ಅರಳಸುರಳಿ, ತೀರ್ಥಹಳ್ಳಿ ತಾಲ್ಲೂಕಿನ ಪುಟ್ಟ ಗ್ರಾಮ ಅರಳಸುರಳಿಯ ನಿವಾಸಿ. ಮೂಲತಃ ವ್ಯಂಗ್ಯಚಿತ್ರಗಾರರಾಗಿರುವ ನಟರಾಜ್ ನಾಡಿನಾದ್ಯಂತ ವ್ಯಂಗ್ಯಚಿತ್ರಕಾರರಾಗಿ ಹೆಚ್ಚು ಜನ ಓದುಗರಿಗೆ ಪರಿಚಿತರಾದವರು. ಈವರೆಗೂ ಐದು ಸಾವಿರಕ್ಕೂ ಹೆಚ್ಚು ವ್ಯಂಗ್ಯಚಿತ್ರಗಳನ್ನು ರಚಿಸಿದ್ದಾರೆ. ಕನ್ನಡದ ಪ್ರಸಿದ್ದ ವಾರ, ಮಾಸ ಪತ್ರಿಕೆಗಳೆಲ್ಲೆಲ್ಲಾ ಇವರ ವ್ಯಂಗ್ಯಚಿತ್ರಗಳು ಪ್ರಕಟವಾಗಿವೆ. ತೀರ್ಥಹಳ್ಳಿಯ ಪ್ರಸಿದ್ದ ಶಿಕ್ಷಣ ಸಂಸ್ಥೆಯಾದ ತುಂಗಾ ಮಹಾವಿದ್ಯಾಲಯದಲ್ಲಿ ಸರಿ ಸುಮಾರು ಮುವತ್ತೈದು ವರ್ಷಗಳ ಕಾಲ ಇಂಗ್ಲಿಷ್ ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಆಕಾಶಬುಟ್ಟಿ ನಟರಾಜ್ ಅರಳಸುರಳಿಯವರ ಚೊಚ್ಚಲ ಕೃತಿ.
ಕಾದಂಬರಿಯಲ್ಲಿ ಆದರ್ಶ ಶಿಕ್ಷಕನಾಗಿರುವ ತಂದೆಯ ಮೌಲ್ಯಗಳು ಒಂದೆಡೆಯಾದರೆ, ಅದೇ ದಾರಿಯಲ್ಲಿ ನಡೆದುಬಂದ ಮಗನ ವ್ಯಾಪಾರಿಕ ಆಲೋಚನೆಗಳು ಬೇರೆಯಾಗಿರುತ್ತವೆ. ಇಬ್ಬರು ಬದುಕಿನಲ್ಲಿ ಆರಿಸಿಕೊಂಡ ದಾರಿ ಒಂದೇಯಾದರೂ.. ನೋಡುವ ದೃಷ್ಟಿಕೋನಗಳು ಬೇರೆ ಬೇರೆ. ಇದು ಬರಿ ಅಪ್ಪ ಮಗನ ಕತೆ ಅಲ್ಲ, ಎರಡು ತಲೆಮಾರುಗಳ ನಡುವೆ ಬದಲಾದ ಮನಸ್ಥಿತಿಗಳ ಅಂತರದ ಕತೆ.
ಕನ್ನಡ ನಟ, ನಿರ್ದೇಶಕ ಇದೀಗ ತಮ್ಮದೊಂದು ಪುಸ್ತಕ ಪ್ರಕಟಿಸುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ಆರ್ಟ್ ಆಫ್ ಸಕ್ಸಸ್ ಎಂಬುದು ಅವರ ಕೃತಿ. ಯಶಸ್ಸಿನ ಮೆಟ್ಟಿಲುಗಳನ್ನು ಏರುತ್ತಲೇ ಬಂದ ನಟ ರಮೇಶ್ ಇಂಥದೊಂದು ಯಶಸ್ಸಿನ ಬಗ್ಗೆ ಹೇಳಲು, ಮಾರ್ಗದರ್ಶಿಯಾಗಲು ತುಂಬ ಅರ್ಹರು. ಅವರ ಈ ಕೃತಿ ಯಶಸ್ಸಿನ ಕಲೆಯ ಬಗ್ಗೆ ಹೇಳುತ್ತದೆ. ರಮೇಶ್ ಅವರದೇ ಆದ ಶೈಲಿಯೊಂದು ಈ ಕೃತಿಯ ಮುಖ್ಯ ಆಕರ್ಷಣೆ.
ಉತ್ತರ ಪರ್ವ”ದಲ್ಲಿ ಆಯ್ಕೆಯಾದ ಅನುವಾದಿತ ಕಥೆಗಳ ಈ ಸಂಕಲನ ಒಂದು ತಾಜಾ ಅನುಭೂತಿಯನ್ನು ಎದುರು ನೋಡುತ್ತಿರುವ ಅಕ್ಷರಮೋಹಿಗಳ ಜೋಳಿಗೆಗೆ ಮುಡಿಪಾಗಿಟ್ಟ ಹೋಳಿಗೆ.
ಜೀವ ಕಾರುಣ್ಯದ ಕವಿತೆಗಳನ್ನು ಒಳಗೊಂಡ ಈ ಕೃತಿಯನ್ನು ಓದಲು ಹತ್ತು ಹಲವು ಕಾರಣಗಳಿವೆ. ಬಹುತ್ವದ ಆಶಯವನ್ನು ಕಟ್ಟಿಕೊಡುವ ಸಂಕಲನ ಸಮಕಾಲೀನ ವೈರುಧ್ಯಗಳ ಮೇಲೆ ಬೆಳಕು ಚೆಲ್ಲುತ್ತದೆ.
ಕನ್ನಡದ ಜನಪ್ರಿಯ ಲೇಖಕರು, ಪತ್ರಕರ್ತರು ಆದ ಜೋಗಿ ಅವರ ‘ಇವರು ಅವರು ದೇವರು’ ಪುಸ್ತಕ ವ್ಯಕ್ತಿಚಿತ್ರಗಳನ್ನು ಕುರಿತ ಆಪ್ತ ಬರಹವಾಗಿದೆ.
ಪ್ರತಿ ನಲ್ವತ್ತು ಸೆಕೆಂಡಿಗೆ ಜಗತ್ತಿನಲ್ಲಿ ಒಂದು ಆತ್ಮಹತ್ಯೆ. ಹದಿಹರೆಯದವರು ಹಾಗೂ ಯುವಜನತೆ ಸಾವಿಗೆ ಒಂದು ಪ್ರಮುಖ ಕಾರಣ ಆತ್ಮಹತ್ಯೆ. ಕುಟುಂಬ ಹಾಗೂ ಸಮಾಜದ ಮೇಲೆ ಆತ್ಮಹತ್ಯೆ ಬೀರುವ ಮಾನಸಿಕ, ಸಾಮಾಜಿಕ, ಆರ್ಥಿಕ ಪರಿಣಾಮ ಅನೂಹ್ಯ ಅಗಣಿತ. ಭಾರತದಲ್ಲಿ ವರ್ಷಂಪ್ರತಿ ಒಂದು ಲಕ್ಷಕ್ಕೂ ಮೀರಿ ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಒಂದು ಆತ್ಮಹತ್ಯೆ ಇಪ್ಪತ್ತು ಜನರ ಬದುಕನ್ನು ಮೂರಾಬಟ್ಟೆ ಮಾಡುತ್ತದೆ. ಅಂದರೆ ಇಪ್ಪತ್ತು ಲಕ್ಷ ಮಂದಿ ಅಪರಾಧಿ ಪ್ರಜ್ಞೆ. ಪಾಪಪ್ರಜ್ಞೆಯಿಂದ ನರಳುತ್ತಾರೆ. ಪರೀಕ್ಷೆಯ ಒತ್ತಡ, ಪ್ರೇಮಭಂಗ, ಪಾಲಕರ ಮಿತಿಮೀರಿದ ಮಹತ್ವಾಕಾಂಕ್ಷೆ. ಅತಿಯಾದ ನಿರೀಕ್ಷೆಗಳು, ಅಸಾಮರ್ಥ್ಯ, ಅದಕ್ಷತೆ, ಒಂಟಿತನ, ತನ್ನನ್ನು ಯಾರೂ ಪ್ರೀತಿಸುತ್ತಿಲ್ಲ ಎಂಬ ತೀವ್ರವಾದ ಕೊರಗು, ಆರ್ಥಿಕ ಸಂಕಷ್ಟಗಳು, ತಿರಸ್ಕಾರ, ತಾತ್ಸಾರ, ಅಪಮಾನ ಮೊದಲಾದ ಕಾರಣಗಳಿಂದ ಆತ್ಮಹತ್ಯೆಗಳಾಗುತ್ತಿವೆ. ಮಹಡಿ ಏರಿ ಹಾರುವುದು, ಅಣೆಕಟ್ಟೆಯಿಂದ ಧುಮುಕುವುದು. ರೈಲಿಗೆ ತಲೆ ಕೊಡುವುದು ಯಾವ ಸಮಸ್ಯೆಗೂ ಪರಿಹಾರವಲ್ಲ. ಸತ್ತ ಮಾತ್ರಕ್ಕೆ ಸಮಸ್ಯೆಗಳು ಮುಗಿಯುವುದಿಲ್ಲ. ತಾಳ್ಮೆಯಿಂದ ಯೋಚಿಸಿದರೆ. ಸುತ್ತಲೂ ನೋಡಿದರೆ ಸಹಾಯಹಸ್ತ ಗೋಚರಿಸುತ್ತದೆ. ಕಣ್ಣೀರು ಒರೆಸುವ ಬೆರಳು ಕಾಣುತ್ತದೆ. ಸಾಂತ್ವನದ ಕೊರಳು ಕೇಳುತ್ತದೆ. ಸಹಾಯ ಬಯಸಿ, ಸಹಾಯ ಮಾಡಿ ಮುಂದಾಗುವ ಅನಾಹುತ ತಪ್ಪಿಸಿ: ಜೀವ ಉಳಿಸಿ ಎಂಬುದೇ ಈ ಕೃತಿಯ ಸಾರ. ನಾಡಿನ ಖ್ಯಾತ ಮನೋವಿಜ್ಞಾನ ಹಾಗೂ ಶಿಕ್ಷಣ ಲೇಖಕ ಡಾ. ಮಹಾಬಲೇಶ್ವರ ರಾವ್ ಈ ಕೃತಿಯ ಕರ್ತೃ.
ನಮ್ಮ ಕಾಲದ ತಲ್ಲಣಗಳಿಗೆ ಮತ್ತು ಸ್ಥಿತ್ಯಂತರಗಳಿಗೆ ಮಾತು ಕೊಡಲಿಕ್ಕೆ ಕಥೆ ಹೇಳಿಮಾಡಿಸಿದ ಪ್ರಕಾರ. ಇದರ ಸಾಧ್ಯತೆಗಳನ್ನು ಕಾಲದಿಂದ ಕಾಲಕ್ಕೆ ಎಲ್ಲ ಕಥೆಗಾರರೂ ಹುಡುಕುತ್ತಲೇ ಬಂದಿದ್ದಾರೆ. ಕಥೆ ಬರೆಯುವ ಜರೂರತ್ತು ಏನಿದೆ ಎನ್ನುವುದನ್ನು ಪುನರ್ ಸ್ಥಾಪಿಸುತ್ತಲೂ ಇದ್ದಾರೆ - ಇದು ಬರಿಯ ಒಳಗಿನ ತಳಮಳವಲ್ಲ ಒಂದು ಸಾಮಾಜಿಕ ಜವಾಬ್ದಾರಿ ಎನ್ನುವಂತೆ. ಸಾಮಾಜಿಕ ಜಾಲತಾಣಗಳು ಬರೆಯುವ ತೀವ್ರತೆಯನ್ನು ಹೆಚ್ಚಿಸುತ್ತಿರುವ ಹಾಗೆಯೇ ಬರವಣಿಗೆಯಲ್ಲಿ ಕಾವು ಕೂರುವ ತಾಳ್ಮೆಯನ್ನು ಕಳೆಯುತ್ತಿವೆ. ತಕ್ಷಣದ ಪ್ರತಿಕ್ರಿಯೆಗಳಿಗೆ ಮನಸೋತಾಗ ಆಳಕ್ಕಿಳಿದ, ಸಾಂದ್ರವಾಗುವ ಕಥನಗಳು ಹುಟ್ಟುವುದು ಕಷ್ಟವಾಗುತ್ತದೆ. ಇಂಥದ್ದರ ನಡುವೆ ಕಥೆಗಾರರು ತಮಗೆ ಬೇಕಾದ ಅವಕಾಶವನ್ನು ಅಲ್ಲಲ್ಲಿ ಹುಡುಕುತ್ತಾ ತಮ್ಮದನ್ನಾಗಿಸಿಕೊಳ್ಳುವತ್ತ ತುಡಿಯುತ್ತಲೇ ಇದ್ದಾರೆ.
ಈ ಕೃತಿಯ ಹಲವು ಅಧ್ಯಾಯಗಳಲ್ಲಿ ಒಂದೊಂದು ಕಥೆಗೆ ವಸ್ತುವಾಗುವಂಥ ಬೆರಗಿನ ವಿವರಗಳಿವೆ. ಸ್ವಾರಸ್ಯಕರ ಮಾಹಿತಿಗಳಿವೆ. ಹಾಗಂತ ಇದು ಅಜ್ಜಿಕಥೆಯಲ್ಲ. ಕುತೂಹಲ, ಪದೇಪದೇ ಕೈಜಗ್ಗುತ್ತದೆ; ಆದರೆ ಇದು ಸಸ್ಪೆನ್ಸ್ ಥಿಲ್ಲರ್ ಅಲ್ಲ. ಕಾಡಿನ ಹತ್ತಾರು ಜೀವಿಗಳ ಬದುಕಿನ ವಿವರವಿದ್ದರೂ ಇದು ಪರಿಸರದ ಕಥೆಯಷ್ಟೇ ಅಲ್ಲ. ಹಲವು ನಂಬಿಕೆ, ಆಚರಣೆಗಳ ಮೆರವಣಿಗೆಯಿದೆ. ಆದರೆ ಇದು ಕಾಡಂಚಿನ/ ಮಲೆನಾಡಿನ ಹಳ್ಳಿಯೊಂದರ ಕಥೆಯಷ್ಟೇ ಆಗಿ ಉಳಿಯುವುದಿಲ್ಲ. ಬದಲಿಗೆ, ಈ ಎಲ್ಲಾ ಅಂಶಗಳನ್ನೂ ಇಷ್ಟಿಷ್ಟೇ ಸೇರಿಸಿ ಹೆಣಿಗೆ ಹಾಕಿದ ಕಾದಂಬರಿ ಎಂಬ ಕುಲಾವಿ
ಹಗ್ಗದ ಮೇಲೆ ನಡೆಯುವಂತಹ ಏಕಾಗ್ರತೆಯಿಂದ ಗಮ್ಯದತ್ತ ಸಾಗುವ ಇಲ್ಲಿನ ಕಥೆಗಳಲ್ಲಿ ನಗರ ಜೀವನದ ಸಂಕೀರ್ಣತೆಯೂ ಇದೆ: ಹಳ್ಳಿಗಳ ಮುಗ್ಧ ಬದುಕಿನ ಸರಳತೆಯೂ ಇದೆ. ಅಜಿತ್ ಆರಿಸಿಕೊಂಡಿರುವ ಕಥಾವಸ್ತುಗಳು ಯಾವುದೇ ಒಂದು ಪ್ರದೇಶಕ್ಕೆ, ವರ್ಗಕ್ಕೆ ಅಥವಾ ಸಮುದಾಯಕ್ಕೆ ಸೀಮಿತವಾಗದೆ, ಎಲ್ಲರನ್ನೂ ಒಳಗಿಳಿಸಿಕೊಂಡು ಪಾತ್ರಗಳೊಂದಿಗೆ ಬೆಸೆಯುತ್ತವೆ.
ಪುಸ್ತಕವೊಂದು ವಾಸ್ತವ ಪ್ರಪಂಚಕ್ಕೆ ಸೆಡ್ಡು ಹೊಡೆದರೆ ಹೇಗೆ? ಕತೆಯಲ್ಲಿ ಓದುಗನೇ ಒಂದು ಪಾತ್ರವಾದರೆ ಏನು ಗತಿ? ಸರ್ವಾಧಿಕಾರಿಯೊಬ್ಬ ಪ್ರಭುತ್ವಕ್ಕೆ ವಿರುದ್ಧವಾದ ಪುಸ್ತಕಗಳಿರುವ ಲೈಬ್ರರಿಗೆ ಹೋದರೆ ಏನಾಗಬಹುದು? ಪುಸ್ತಕಗಳ ಬಗ್ಗೆ, ಓದುವುದರ ಬಗ್ಗೆ, ಲೈಬ್ರರಿಯ ಬಗ್ಗೆ ಪ್ರಪಂಚದ ಬೇರೆ ಬೇರೆ ದೇಶಗಳ ಕತೆಗಾರರು ಬರೆದಿರುವ ಸಣ್ಣಕತೆಗಳ ಸಂಕಲನ ಇದು. ಇಲ್ಲಿ ಲೂಯಿಜಿ ಪಿರಾಂಡೆಲೊ, ಐಸಾಕ್ ಬಾಬೆಲ್, ಹೋರ್ಹೆ ಲೂಯಿಸ್ ಬೋರ್ಹೆಸ್, ಹುಲಿಯೊ ಕೋರ್ತಜಾರ್, ಇತಾಲೊ ಕಲ್ವಿನೊ ಮೊದಲಾದ ವಿಖ್ಯಾತ ಲೇಖಕರಿರುವಂತೆ ಎದುಅರ್ದೊ ಗಲಿಯಾನೊ, ಮಾರ್ಗರೆಟ್ ಆಟ್ವುಡ್, ರೋಡ್ರಿಗೊ ರೇಯಿ ರೋಸ, ರೊಬರ್ತೊ ಕೆಸಾದ ಮುಂತಾದ ಸಮಕಾಲೀನ ಲೇಖಕರೂ ಇದ್ದಾರೆ. ಮಲಯಾಳಂ ಭಾಷೆಯ ಒ.ವಿ. ವಿಜಯನ್, ಪಾಲ್ ಝಕಾರಿಯ ಅವರ ಕತೆಗಳೂ ಇಲ್ಲಿವೆ. ಎಸ್. ದಿವಾಕರ್ ತಮ್ಮ ಹಲವು ದಶಕಗಳ ಓದಿನ ಉಗ್ರಾಣದಿಂದ ಹೆಕ್ಕಿ ತೆಗೆದು ಅನುವಾದಿಸಿರುವ ಇಂಥದೊಂದು ಕಥಾ ಸಂಕಲನ ಇಂಗ್ಲಿಷಿನಲ್ಲೂ ಇದ್ದಂತಿಲ್ಲ. ನೀವು ಪುಸ್ತಕವನ್ನು ಪ್ರೀತಿಸುವವರೆ? ಓದುವುದನ್ನು ಇಷ್ಟಪಡುವವರೆ? ಹಾಗಿದ್ದರೆ ಇಲ್ಲಿ ಎರಡು ರಟ್ಟುಗಳ ನಡುವೆ ಇರುವ ಕತೆಗಳನ್ನು ಓದಲೇಬೇಕು.
ವಿಜಯಭಾಸ್ಕರ್ ಸಂಗೀತ ನಿರ್ದೇಶನಕ್ಕೆ ಘನತೆ, ಗೌರವಗಳನ್ನು ತಂದವರು. ನಾನು ಅವರು ಚಿತ್ರರಂಗ ಪ್ರವೇಶಿಸಿದ ದಿನಗಳಿಂದಲೂ ಅವರ ಕಾರ್ಯ ವೈಖರಿಯನ್ನು ನೋಡುತ್ತಾ ಬಂದಿದ್ದೇನೆ, ಅವರು ಕೆಲಸವನ್ನು ಅರಸುತ್ತಿರುವ ಸಂದರ್ಭದಲ್ಲಿಯೂ ನೋಡಿದ್ದೇನೆ, ಕೈತುಂಬಾ ಕೆಲಸ ಇದ್ದ ಕಾಲದಲ್ಲಿಯೂ ನೋಡಿದ್ದೇನೆ. ಸ್ಥಿತಪ್ರಜ್ಞ ಸಾಧಕರು, ಚಿತ್ರಕ್ಕೆ ಏನು ಬೇಕು ಎನ್ನುವುದರ ಕಡೆಗೆ ಸದಾ ಅವರ ಚಿತ್ತ ಇರುತ್ತಿತ್ತು. ಸಂಗೀತವನ್ನು ಎಷ್ಟು ಆಳವಾಗಿ ಬಲ್ಲರೋ, ಸಾಹಿತ್ಯವನ್ನೂ ಕೂಡ ಅಷ್ಟೇ ಆಳವಾಗಿ ತಿಳಿದವರು. ಚಿತ್ರದ ಅಗತ್ಯವನ್ನು ಅರಿತು ಸಂಗೀತವನ್ನು ನೀಡುತ್ತಿದ್ದರು. ಹಾಡನ್ನು ರಂಜಕೀಯವಾಗಿಸುವುದು ಎಂದಿಗೂ ಅವರ ಉದ್ದೇಶವಾಗಿರಲಿಲ್ಲ. ಅದು ಕಥೆಯ ಹಂದರದಲ್ಲಿ ಸೇರಬೇಕು, ಪಾತ್ರದ ಅಭಿವ್ಯಕ್ತಿಯಾಗಬೇಕು, ಜನರ ಮನದಲ್ಲಿ ಉಳಿದುಕೊಳ್ಳಬೇಕು ಎನ್ನುವುದನ್ನು ಸದಾ ಚಿಂತಿಸುತ್ತಿದ್ದರು, ಹೀಗಾಗಿ ಅವರು ಸೃಷ್ಟಿಸಿದ ಗೀತೆಗಳು ಇಂದಿಗೂ ಅಮರವಾಗಿ ಉಳಿದಿವೆ. ವಿಜಯಭಾಸ್ಕರ್ ಕನ್ನಡಕ್ಕೆ ಟೈಟಲ್ ಕಾರ್ಡ್ ತೋರಿಸುವಲ್ಲಿ ಹೊಸತನ ತಂದರು, ಥೀಂ ಮ್ಯೂಸಿಕ್ ತಂದರು, ಶಾಟ್ ಡಿವಿಷನ್ಗಳನ್ನು ತಂದರು, ಹೊಸ ವಾದ್ಯಗಳನ್ನು ಬಳಸಿದರು, ಬಹಳ ಮುಖ್ಯವಾಗಿ ಕನ್ನಡದ ಗಾಯಕರನ್ನು ಹುಡುಕಿ ಅವರ ಬಳಿ ಹಾಡಿಸಿದರು. ವಿಜಯಭಾಸ್ಕರ್ ಇದ್ದಲ್ಲಿ ಹೊಸತನ ಮತ್ತು ಪ್ರಯೋಗಶೀಲತೆ ಇದ್ದೇ ಇರುತ್ತಿತ್ತು. ಹೀಗಾಗಿ ಅವರು ವ್ಯಾಪಾರಿ ಚಿತ್ರಗಳಂತೆ ಕಲಾತ್ಮಕ ಚಿತ್ರಗಳಿಗೂ ವರದಾನವಾದರು. ವಿಜಯಭಾಸ್ಕರ್ ಗೀತ ರಚನೆಕಾರರ, ಸಂಗೀತ ನಿರ್ದೇಶಕರ ಹಕ್ಕುಗಳಿಗೆ ಹೋರಾಡಿದರು, ಈ ಹೋರಾಟದಲ್ಲಿ ಅವರ ತತ್ಪರತೆಯನ್ನು ನಾನು ಹತ್ತಿರದಿಂದ ಕಂಡಿದ್ದೇನೆ, 'ಸಿನಿ' ಮ್ಯೂಸಿಷಿಯನ್ಸ್ ಅಸೋಸಿಯೇಷನ್ ಅಧ್ಯಕ್ಷರಾಗಿ ಅವರು ವಾದ್ಯಗಾರರ ಅಭ್ಯುದಯಕ್ಕೆ ಶ್ರಮಿಸಿದರು. ವಿಜಯಭಾಸ್ಕರ್ ನಿಜವಾದ ಅರ್ಥದಲ್ಲಿ ಶಕಪುರುಷರು. - ಆರ್.ಎನ್.ಜಯಗೋಪಾಲ್.
ಅವರವರ ಅಂತರಂಗದ ಅರಿವು ಅವರವರಿಗೇ ಎಂಬ ಭಾವವಿಲ್ಲಿದೆ. ಚಿಗುರಿದ ಆ ಮರದಲ್ಲಿ ಕುಳಿತು ಒಗರು ಮೆಲ್ಲುವ ಎಲ್ಲ ಕೋಗಿಲೆಗಳೂ ಹಾಡುತ್ತಿರುವುದಿಲ್ಲ ಎಂಬ ಸಾಲು ಮನಮುಟ್ಟುತ್ತದೆ. ಒಂದು ಮರ ಕಡಿದು ಉರುಳಿಸಿದ ಮೇಲೆ ಎಂಬ ಕವಿತೆ ಕವಯಿತ್ರಿಯೊಳಗಿನ ಪ್ರಕೃತಿ ಪ್ರೇಮ ಮತ್ತು ಜೀವನ ಪ್ರೀತಿಗೆ ಸಾಕ್ಷಿಯಂತಿದೆ. ಒಂದು ಮರ ಕಡಿದು ಉರುಳಿಸಿದ ಮೇಲೆ ಚಿಟ್ಟೆ ಪಟಗುಡುವುದಿಲ್ಲ ಹಕ್ಕಿ ಹಾಡುವುದಿಲ್ಲ ಗೂಡು ಮಾಡುವುದಿಲ್ಲ ಅಳಿಲು ಆಡುವುದಿಲ್ಲ ಹೀಗೆ ಒಂದು ಮರದೊಂದಿಗೆ ಅಂತ್ಯವಾಗುವ ಹಲವು ಜೀವಗಳ ಬದುಕಿನ ವ್ಯಥೆ ಇಲ್ಲಿ ವ್ಯಕ್ತವಾಗಿದೆ.
ಇಂಗ್ಲಿಷ್ ಲೇಖಕ ಕೆಂಟ್ ಎಂ. ಕೀತ್ ಆಂಗ್ಲ ಭಾಷೆಯಲ್ಲಿ ‘ಎನಿವೇ’ ಪುಸ್ತಕ ಬರೆದಿರುವ ಅನುಭವ ಕಥನವಿದು.
ಎಪ್ಪತ್ತುಎಪ್ಪತೈದು ವರುಷಗಳ ಹಿಂದೆ ವಿಧವೆಯೊಬ್ಬಳು, ಮರು ಮದುವೆಗೆ ಅವಕಾಶವಿಲ್ಲದೆ, ಮತ್ತೆ ಬದುಕು ಕಟ್ಟಿ ಕೊಳ್ಳಲು ಪ್ರಯತ್ನಿಸಿ ನರಕ ಯಾತನೆ ಅನುಭವಿಸಿದ ಒಬ್ಬ ವಿಧವೆಯ ಕಥೆಯಿತು
ಇದೊಂದು ಮಹತ್ವದ ಕೃತಿ. ಕಗ್ಗಗಳ ಕುರಿತಾಗಿ ವ್ಯಾಖ್ಯಾನ ಹೊಸದೇನಲ್ಲ. ಆದರೆ ಆ ಕಗ್ಗದ ಸಾರವನ್ನು ಒಂದು ಪುಟ್ಟ ಕಥೆಯ ಮೂಲಕ ಹೇಳುವ ಪ್ರಯತ್ನ ಮಾತ್ರ ಹೊಚ್ಚಹೊಸದು. ವಿ. ಗೋಪುಕುಮಾರ್ ಅವರು ನ್ಯಾನೋ ಕಥಾಪ್ರಕಾರದ ನಿಷ್ಠರು ಮತ್ತು ಶ್ರೇಷ್ಠರೂ ಕೂಡ. ನಾನವರ ಕಥೆಗಳನ್ನು ಒಂದೇ ಉಸಿರಿನಲ್ಲಿ ಓದಿದ್ದೆ. ಹಾಗೆ ಓದಿಸಿಕೊಳ್ಳುವ ಗುಣ ಅವರ ಕಥೆಗಳಿಗಿದೆ.
ಕಥಾಸಂಕ್ರಾಂತಿ2024 ಕಥಾಸಂಕಲನದಲ್ಲಿ ಮೂರು ಬಹುಮಾನಿತ ಕಥೆಗಳು ಹಾಗೂ ಏಳು ಮೆಚ್ಚುಗೆ ಪಡೆದ ಕಥೆಗಳು ಇವೆ. ಇಲ್ಲಿನ ಪ್ರತಿ ಕಥೆಯೂ ವಿಶಿಷ್ಟ, ವಿಭಿನ್ನ, ಪ್ರಯೋಗಶೀಲತೆ, ಭಾಷಾ ಬಳಕೆ, ಕಥಾವಸ್ತುವಿನ ಆಯ್ಕೆಯಲ್ಲಿ ತೋರಿರುವ ವೈವಿಧ್ಯತೆ, ಕಥಾವಿನ್ಯಾಸ, ನಿರೂಪಣಾ ಕುಶಲತೆ ಹೀಗೆ ಎಲ್ಲದರಲ್ಲಿಯೂ ಈ ಕಥೆಗಳು ತಟ್ಟನೆ ಗಮನ ಸೆಳೆಯುತ್ತವೆ. ಸಮಕಾಲೀನ ವಿಷಯ, ಗ್ರಾಮೀಣ ಸಮಾಜದ ಬದುಕಿನಲ್ಲಿ ಇಣುಕುವ ಚಲನಶೀಲತೆ, ಮನುಷ್ಯರ ಸಂಕಟಗಳು, ಸಂದಿಗ್ಧತೆಗೆ ಸಿಲುಕಿಸುವ ಪ್ರೇಮ, ಬದುಕಿನ ಹೋರಾಟದಲ್ಲಿ ಗೆಲುವು ಸಾಧಿಸಲು ಕಂಡುಕೊಳ್ಳುವ ಹೊಸ ದಾರಿಗಳು, ಮುಗ್ಧ ಬಾಲಕಿಯರು ಎದುರಿಸಬೇಕಾದ ತಲ್ಲಣಗಳು, ಭಾಷೆಯೊಂದಿಗೆ ಬದುಕುವ ವ್ಯಕ್ತಿ ವ್ಯಕ್ತಿತ್ವವನ್ನು ಕಳೆದುಕೊಳ್ಳುವ ಬಗೆ... ಈ ಕಥೆಗಳಲ್ಲಿ ಅಡಕವಾಗಿವೆ. ಕಥಾಸ್ಪರ್ಧೆಗೆ ಬಂದ ನೂರಾರು ಕಥೆಗಳನ್ನು ಹಲವು ವಿಧದಲ್ಲಿ ಜರಡಿ ಹಿಡಿದು ಅಂತಿಮ ಸುತ್ತಿನಲ್ಲಿ ಆಯ್ದ ಐವತ್ತು ಕಥೆಗಳಲ್ಲಿ ಕೊನೆಗುಳಿದ ಹತ್ತು ಕಥೆಗಳು ಕನ್ನಡದ ಲೇಖಕರು ಕಥಾಪ್ರಕಾರದಲ್ಲಿ ತುಳಿಯುತ್ತಿರುವ ಹೊಸ ದಾರಿಗಳನ್ನು, ಹೊಸ ಲೇಖಕರ ಮನೋಧರ್ಮವನ್ನು ಸಮರ್ಥವಾಗಿ ಪ್ರತಿನಿಧಿಸುತ್ತವೆ.
nil
Showing 1 to 30 of 170 results